ಛಲವಿದ್ದರೆ ತನಿಖಾ ವರದಿಗಾರರಾಗಲು ಸಾಧ್ಯ : ವಿಜಯಲಕ್ಷ್ಮೀ ಶಿಬರೂರು
ಪುತ್ತೂರು : ತನಿಖಾ ವರದಿಗಾರಿಕೆ ಪತ್ರಿಕೋದ್ಯಮದ ವಿಭಿನ್ನವಾದ ಕ್ಷೇತ್ರತನಿಖಾ ವರದಿಗಾರರಾಗಲು ಮಾನಸಿಕವಾಗಿ ಸದೃಢವಾಗಿರಬೇಕು. ಚುಚ್ಚು ಮಾತುಗಳು, ಹೀಯಾಳಿಕೆಗಳಿಂದ ಮಾನಸಿಕವಾಗಿ ಕುಗ್ಗಬಾರದು. ನಾವು ವಿಭಿನ್ನವಾಗಿರಬೇಕಾದರೆ ಅತ್ಯಂತ ಸಾಮರ್ಥ್ಯವಂತರಾಗಿರಬೇಕು. ಅಲ್ಲದೇ ಪ್ರಚಲಿತ ವಿದ್ಯಮಾನಗಳ ಅರಿವಿರಬೇಕು ಎಂದು ಸುವರ್ಣ ನ್ಯೂಸ್ನ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ದಶಮಾನೋತ್ಸವ ಆಚರಣೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆದ ರಾಜ್ಯಮಟ್ಟದ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ತನಿಖಾ ವರದಿಗಾರಿಕೆ ವಿಷಯದ ಬಗೆಗೆ ಮಾತನಾಡಿದರು.
ತನಿಖಾ ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ. ಸಮಾಜದ ಅವ್ಯವಸ್ಥೆಗಳನ್ನು ಪ್ರತ್ಯಕ್ಷವಾಗಿ ತೋರಿಸುವುದೇ ತನಿಖಾ ವರದಿಗಾರಿಕೆ. ಇದು ಕ್ಷಣ ಕ್ಷಣಕ್ಕೂ ಅಪಾಯಕಾರಿಯಾಗಿರುವ ರೋಮಾಂಚನಕಾರಿ ವರದಿಗಾರಿಕೆ. ಮಾತ್ರವಲ್ಲದೇ ಇದಕ್ಕೆ ವಿಷಯದ ಗಹನವಾದಂತಹ ಅಧ್ಯಯನ ಅವಶ್ಯಕ. ವಿಚಾರಗಳ ಪರಿಣತಿಯನ್ನು ಪಡೆದಿರಬೇಕು ಎಂದು ಹೇಳಿದರು.
ನೈಜತೆಯ ಪ್ರತ್ಯಕ್ಷ ಪ್ರದರ್ಶನವೇ ತನಿಖಾ ವರದಿಗಾರಿಕೆ. ಭಾವನಾತ್ಮಕತೆಗೆ ಇಲ್ಲಿ ಜಾಗವಿಲ್ಲ. ತನಿಖಾ ವರದಿಗಾರರಾಗಲು ಛಲ, ಗಟ್ಟಿತನವಿರಬೇಕು. ಗ್ರಾಮೀಣ ಭಾಗದವರು ಇವೆಲ್ಲದರಲ್ಲೂ ಮುಂಚೂಣಿಯಲ್ಲಿರುತ್ತಾರೆ. ಅಲ್ಲದೇ ಗ್ರಾಮೀಣ ಭಾಗದವರು ಕಷ್ಟಗಳನ್ನು ಅನುಭವಿಸುವ ಸಹನೆಯನ್ನು ಹೊಂದಿರುತ್ತಾರೆ. ಸಹನೆ ತಾಳ್ಮೆ ತನಿಖಾ ಪತ್ರಿಕೋದ್ಯಮದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ನುಡಿದರು.
ವಿಚಾರಗೋಷ್ಟಿಯ ಅಂತಿಮ ಭಾಗವಾಗಿ ವಿಜಯಲಕ್ಷ್ಮಿ ಶೀಬರೂರು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಾ.ಪಿ.ಆರ್. ನಿಡ್ಪಳ್ಳೀ ನಿರ್ವಹಿಸಿದರು.