ವಿವೇಕಾನಂದ ಕಾಲೇಜಿನಲ್ಲಿ ’ಸೃಷ್ಠಿ’ ಬರಹ, ಸಾಹಿತ್ಯ ಕಮ್ಮಟದ ಉದ್ಘಾಟನೆ – ಮಸ್ತಕದಲ್ಲಿ ನೆನಪಿಟ್ಟುಕೊಂಡರೆ ಪುಸ್ತಕದಲ್ಲಿ ಬರೆಯಲು ಸಾಧ್ಯ: ಸಂತೋಷ್ ತಮ್ಮಯ್ಯ
ಪುತ್ತೂರು: ಭಗವಂತನ ಕುರಿತ ಗ್ರಂಥಗಳು ಕೂಡ ಸಮಾಜಕ್ಕೆ ಸಂದೇಶವನ್ನು ನೀಡಿವೆ. ಹಿಂದಿನ ಕಾಲದಲ್ಲಿ ಶಿಲ್ಪಿಗಳು ವೇದಗಳಲ್ಲಿ ಭಗವಂತನ ಬಗೆಗೆ ವರ್ಣನೆ ಮಾಡಿದನ್ನು ಮನಸ್ಸಿನಲ್ಲಿ ಧ್ಯಾನಿಸಿ ತಮ್ಮ ಶಿಲ್ಪವನ್ನು ರೂಪುಗೊಳಿಸುತ್ತಿದ್ದರು. ಅಕ್ಷರಗಳನ್ನು, ಬರಹಗಳನ್ನು ಮಸ್ತಕದಲ್ಲಿ ನೆನಪಿನಲ್ಲಿಟ್ಟುಕೊಂಡರೆ ಪುಸ್ತಕದಲ್ಲಿ ಬರೆಯಲು ಸಾಧ್ಯ ಎಂದು ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜು ಮತ್ತು ಪದವಿ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಭಾಷಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ’ಸೃಷ್ಠಿ’ ಎಂಬ ಸಹೃದಯ ಬರಹ ಮತ್ತು ಸಾಹಿತ್ಯಗಳನ್ನು ರೂಪಿಸುವ ಹಾಗೂ ಪ್ರೇರೇಪಿಸುವ ಒಂದು ದಿನದ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಬರಹ ಮತ್ತು ಸಾಹಿತ್ಯವು ಸಮಾಜಕ್ಕೆ ಅರ್ಪಿತವಾಗಿಯೇ ಹುಟ್ಟಿದೆ. ಇದನ್ನು ದೇವರ ವರ ಎಂದೂ ಕರೆಯಬಹುದು. ಕಾಲಕಾಲಕ್ಕೆ ಸಾಹಿತ್ಯ, ಬರವಣಿಗೆಗಳು ಸಮಾಜಕ್ಕೆ ಅರ್ಪಿತವಾಗುತ್ತಿವೆ. ಸಾಹಿತ್ಯದ ಬಲದಿಂದಲೇ ಭಾರತದಲ್ಲಿ ನಡೆದ ಅದೆಷ್ಟೋ ಕ್ರಾಂತಿಗಳು ಯಶಸ್ವಿಯಾದದ್ದು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಚ್ಚು ಬೆಂಬಲ ಸಿಕ್ಕಿಲ್ಲ ಎಂಬ ಮಾತಿದೆ, ಅದಕ್ಕೆ ಆ ಕಾಲದಲ್ಲಿ ಸಾಹಿತ್ಯದ ಕೊರತೆಯೇ ಕಾರಣ ಎಂದು ಸಾರ್ವರ್ಕರ್ ಬರೆದಿದ್ದರು. ಸಾಹಿತ್ಯದ ಪಲ್ಲಟದಿಂದ ದೇಶಕ್ಕೆ ಮಾರಕವಾಗುತ್ತದೆ. ಸಾಹಿತ್ಯಕ್ಕೆ ಮತ್ತು ರಾಷ್ಟ್ರೀಯತೆಗೆ ಅವಿನಾಭಾವ ಸಂಬಂಧವಿದೆ. ಸಾಹಿತ್ಯದ ಮೂಲಕ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸಬಹುದು ಎಂದು ಹೇಳಿದರು.
ಇಂದು ಸತ್ಯದ ಪ್ರತಿಪಾದನೆ ಮಾಡುವ ಜನರ ಸಂಖ್ಯೆ ಕಡಿಮೆಯಾಗಿದೆ. ಅಂತೆಯೇ ಕೆಲವು ಮಾಧ್ಯಮಗಳು ಸುಳ್ಳನ್ನು ಪಸರಿಸುತ್ತಿವೆ. ಸಾಹಿತ್ಯದ ಬರಹದ ಮೂಲಕ ನಿರ್ಭೀತವಾಗಿ ರಾಷ್ಟ್ರೀಯತೆಯನ್ನು ಮೆರೆಯುವ ಕಾರ್ಯವಾಗಬೇಕು. ನಿರ್ಭೀತ ಬರಹಗಾರರು, ಸಾಹಿತಿಗಳು, ಸತ್ಯ ಶೋಧಕ ಸಂಗತಿಯನ್ನು ತಿಳಿಸುವಂತಾಗಬೇಕು ಎಂದು ನುಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರಿಗೂ ಲೇಖನ ಬರೆಯಲು ಸಾಧ್ಯವಿಲ್ಲ. ಆದರೆ ಎಲ್ಲರಲ್ಲೂ ಬರವಣಿಗೆ ಕುರಿತು ಆಸಕ್ತಿ ಮೊಳಕೆಯೊಡೆಯುವಂತೆ ಪ್ರೇರೇಪಿಸುವ ಕೆಲಸವಾಗಬೇಕು. ಜನಪ್ರಿಯತೆ, ಪ್ರಶಸ್ತಿಗೋಸ್ಕರ ಸಾಹಿತ್ಯ ಅಥವಾ ಬರವಣಿಗೆಯನ್ನು ನೆಚ್ಚಿಕೊಂಡವರು ಹಲವರಿದ್ದಾರೆ. ಇದರ ಬದಲಾಗಿ ಸೃಜನಶೀಲ ಲೇಖಕರನ್ನು ಬೆಳೆಸಬೇಕು. ಮೌಲ್ಯಗಳ, ರಾಷ್ಟ್ರೀಯತೆಯ, ಪರಿಸರದ ಕುರಿತ ಸಾಮಾಜಿಕ ಕಳಕಳಿಯನ್ನು ಭಿತ್ತರಿಸುವ ಕೆಲಸವಾಗಬೇಕು. ಆರುತ್ತಿರುವ ಸಾಹಿತ್ಯ ಪ್ರಜ್ಞೆಯನ್ನು ಬೆಳೆಸುವ ಕಾರ್ಯವಾಗಭೇಕು ಎಂದರು.
ವಿದ್ಯಾರ್ಥಿ ಭರತ್ ಕೊಲ್ಪೆ ಪ್ರಾರ್ಥಿಸಿದರು. ವಿವೇಕಾನಂದ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಸ್ವಾಗತಿಸಿ ಪ್ರಸ್ತಾವಿಸಿದರು. ಪದವಿ ಮತ್ತು ಸ್ನಾತಕೋತ್ತರ ಪತ್ರಿಕೋಮದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು.