’ಹವಿಗನ್ನಡ ಭಾಷೆ ಮತ್ತು ಸಾಹಿತ್ಯ ಬಗೆಗಿನ ರಾಜ್ಯಮಟ್ಟದ ವಿಚಾರಗೋಷ್ಠಿ- ಹವಿಗನ್ನಡದ ಸೊಗಡು ಸಮಾಜಕ್ಕೆ ತಿಳಿಯಬೇಕು: ವಿ.ವಿ. ಭಟ್
ಪುತ್ತೂರು: ಭಾಷೆಯನ್ನು ಉಪಯೋಗಿಸುವಾಗ ಉಂಟಾಗುವ ಹಾವ-ಭಾವ, ಸ್ವರದ ಏರಿಳಿತ ಎಲ್ಲವೂ ಭಾಷೆಯ ವೈವಿಧ್ಯತೆಯಾಗಿದೆ, ಇದನ್ನು ಭಾಷಾ ಶಾಸ್ತ್ರ ಎನ್ನಬಹುದು. ಭಾಷೆಯ ಮೂಲಕ ಸಂಸ್ಕೃತಿಯನ್ನು ಬೆಳೆಸುವ ಕೆಲಸವಾಗಬೇಕು. ಇಡೀ ವಿಶ್ವದಲ್ಲಿ ಭಾರತವನ್ನು ಅನ್ಯಾನ್ಯ ಭಾಷೆಯಿಂದಾಗಿ ಗುರುತಿಸಲಾಗುತ್ತಿದೆ. ಹವಿಗನ್ನಡವನ್ನು ಬಳಸದೆ ಹವ್ಯಕ ಕನ್ನಡ ಭಾಷೆ ಅಳಿವಿನಂಚಿಗೆ ಬಂದಿದೆ. ಹಾಗಾಗಿ ಇದನ್ನು ಬಳಸುವ ಕುರಿತು ಕಾರ್ಯಪ್ರವೃತರಾಗಬೇಕು ಎಂದು ವಿಶ್ರಾಂತ ಐಎಎಸ್ ಅಧಿಕಾರಿ, ಭಾರತ ಸರಕಾರದ ಮಾಜಿ ಕಾರ್ಯದರ್ಶಿ ವಿ.ವಿ. ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ವಿವೇಕಾನಂದ ಸೆಂಟರ್ ಫಾರ್ ರಿಸರ್ಚ್ ಸ್ಟಡೀಸ್ನ ಆಶ್ರಯ ಹಾಗೂ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ನಡೆದ ’ಹವಿಗನ್ನಡ ಭಾಷೆ ಮತ್ತು ಸಾಹಿತ್ಯ’ ಎಂಬ ವಿಷಯದ ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹವ್ಯಕ ಭಾಷೆ ಕನ್ನಡಭಾಷೆಯ ಇನ್ನೊಂದು ರೂಪ. ಹವ್ಯಕ ಕನ್ನಡ ಭಾಷೆಯ ಪ್ರತ್ಯೇಕತೆಗಾಗಿ ಯಾವ ಪ್ರಯತ್ನವೂ ಇಲ್ಲ. ಆದರೆ ಆ ಭಾಷೆಯ ಸೊಗಡನ್ನು ಪಸರಿಸುವ ಪ್ರಯತ್ನಗಳಾಗಬೇಕು. ಹವ್ಯಕ ಭಾಷೆಯ ವಿಸ್ತರಣೆಗೆ ವಿಚಾರಗೋಷ್ಠಿ ಬುನಾದಿಯಾಗಬೇಕು. ಆಯಾಯ ಪ್ರದೇಶದಲ್ಲಿ ಬಳಕೆಯಲ್ಲಿರುವ ಹವಿಗನ್ನಡವನ್ನು ಬಳಸಬೇಕು. ನಾವು ಸಂಕೋಚ ಬಿಟ್ಟು ಭಾಷೆಯನ್ನು ಬಳಸಿದಾಗ ಮಾತ್ರ ಅದು ಬೆಳೆಯುವುದಕ್ಕೆ ಸಾಧ್ಯ ಎಂದರು.
ಹವಿಗನ್ನಡಿಗರ ಭಾಷಾ ಪ್ರೇಮ, ಅಭಿಮಾನ ಹೆಚ್ಚಬೇಕು. ಭಾಷಾ ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಮನೆ ಮಾತು, ವ್ಯವಹಾರಗಳ ಮಾತುಗಳಲ್ಲಿ ಹವಿಗನ್ನಡದ ಬಳಕೆ ತೀವ್ರವಾಗಬೇಕು ಹಾಗೂ ಬರವಣಿಗೆಯ ಮೂಲಕ ಹವಿಗನ್ನಡವನ್ನು ಬಳಸಬೇಕು. ಗೊತ್ತಿರುವ ಎಲ್ಲ ಭಾಷೆಯನ್ನು ಬೇರೆ ಬೇರೆ ಸಂದರ್ಭದಲ್ಲಿ ಉಪಯೋಗಿಸಬೇಕು. ಆದರೆ ಎಲ್ಲ ಭಾಷೆಯನ್ನು ಒಂದುಗೂಡಿಸಿ ಮಾತನಾಡುವುದು ಸಲ್ಲದು ಎಂದು ಅಭಿಪ್ರಾಯಪಟ್ಟರು.
ಕೃತಿ ಲೋಕಾರ್ಪಣೆ
ಸುಬ್ಬರಾಯ ಮತ್ತೀಹಳ್ಳಿ ಅನುವಾದಿಸಿದ ’ಡಾ. ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಹವಿಗನ್ನಡ ಅನುವಾದ’, ಡಾ. ಗಜಾನನ ಹೆಗಡೆ ಹಡಿನಬಾಳ ರಚಿಸಿರುವ ’ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಜನಪದ ಸಂಸ್ಕೃತಿ’ ಕೃತಿಗಳನ್ನು ಇಸ್ರೋದ ನಿವೃತ್ತ ವಿಜ್ಞಾನಿ ಪಿ.ಜೆ. ಭಟ್ ಲೋಕಾರ್ಪಣೆಗೊಳಿಸಿದರು.
’ಡಾ. ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಹವಿಗನ್ನಡ ಅನುವಾದ’ ಕೃತಿಯ ಅನುವಾದಕ ಸುಬ್ಬರಾಯ ಮತ್ತೀಹಳ್ಳಿ ಮಾತನಾಡಿ, ಭಾಷೆ ಕೇವಲ ಆಡುವಂತದಲ್ಲ. ನಮ್ಮ ಸ್ಮೃತಿಯಲ್ಲಿ ಉಳಿದು ಸಾವಿರಾರು ವರ್ಷಗಳ ಕಾಲ ಒಬ್ಬರಿಂದೊಬ್ಬರಿಗೆ ಪ್ರಸರಿಸುವ ಕೆಲಸವಾಗಬೇಕು. ನಮ್ಮ ಜಾನಪದ ಸಂಸ್ಕೃತಿಯನ್ನು ಆಡು ಮತ್ತು ನುಡಿಯ ಮೂಲಕ ಬೆಳೆಸಬೇಕು. ಇತ್ತೀಚೆಗೆ ಎಲ್ಲ ಭಾಷೆಗಳು ತಮ್ಮ ಭಾಷಾ ಪ್ರಾಬಲ್ಯವನ್ನು ತಿಳಿಸುವ ಕೆಲಸಗಳಾಗುತ್ತಿದೆ ಇದು ಸಂತಸದ ವಿಚಾರ ಎಂದು ಹೇಳಿದರು.
’ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಜನಪದ ಸಂಸ್ಕೃತಿ’ ಕೃತಿಕಾರ ಡಾ. ಗಜಾನನ ಹೆಗಡೆ ಹಡಿನಬಾಳ ಮಾತನಾಡಿ, ಹವಿಗನ್ನಡದಲ್ಲಿ ಪ್ರಾದೇಶಿಕ ಭಿನ್ನತೆ ಇದ್ದರೂ ನಮ್ಮಲ್ಲಿರುವ ಸಂಸ್ಕೃತಿ, ಸಂಸ್ಕಾರ ಒಂದೇ. ಎಲ್ಲರನ್ನೂ ಒಂದುಗೂಡಿಸಿದ ಸಂಸ್ಕೃತಿ ಹವ್ಯಕರದ್ದು ಎಂದು ಹೇಳಿದರು.
ಇಸ್ರೋದ ನಿವೃತ್ತ ವಿಜ್ಞಾನಿ ಪಿ.ಜೆ. ಭಟ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸುಬ್ಬರಾಯ ಮತ್ತೀಹಳ್ಳಿ ಅವರು ಡಾ. ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಹವಿಗನ್ನಡ ಅನುವಾದವನ್ನು ಮಾಡಿದ್ದಾರೆ, ಆದರೆ ಅದು ಅನುವಾದವಲ್ಲ ಅನುಸ್ಪಂದನೆ ಎನ್ನಬಹುದು. ಅಂತೆಯೇ ಗಜಾನನ ಹೆಗೆಡೆ ಅವರ ಉತ್ತರ ಕನ್ನಡದ ಜನಪದ ಸಂಸ್ಕೃತಿಯನ್ನು ಎಲ್ಲರಿಗೂ ತಿಳಿಸುವ ಕಾರ್ಯ ಮಾಡಿದ್ದಾರೆ ಇದು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಪುಸ್ತಕ ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ ಮಾತನಾಡಿದರು. ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ವಿಚಾರಗೋಷ್ಠಿ ಸಂಯೋಜಕ ಡಾ. ಶ್ರೀಧರ ಎಚ್.ಜಿ. ಪ್ರಸ್ತಾವನೆಗೈದು ಮಾತನಾಡಿ, ಹವ್ಯಕರು ಹವಿಗನ್ನಡದ ಮೂಲಕ ಸುಮಾರು ಏಳು ಸಾವಿರ ಕೃತಿಗಳನ್ನು ಬರೆದು ದೇಶಕ್ಕೆ ನೀಡಿದ್ದಾರೆ ಎಂದು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿ ಮಾತನಾಡಿ, ಆಚರಣೆ, ಸಂಸ್ಕೃತಿಯ ಆಧಾರದ ಮೇಲೆ ಭಾಷೆ ಬೆಳೆಯುತ್ತದೆ. ಹವ್ಯಕರ ಸಂಸ್ಕೃತಿಯೂ ಆಧುನಿಕತೆಯ ರಭಸಕ್ಕೆ ಮರೆಯಾಗುತ್ತಿದೆ. ಇದರಿಂದಾಗಿ ಭಾಷೆಯ ಮೇಲೂ ಪರಿಣಾಮಗಳಾಗುತ್ತಾ ಬಂದಿದೆ. ಹವಿಗನ್ನಡ ಉಳಿವಿಗೆ ಸಾಹಿತ್ಯ ಮುಖ್ಯ. ಸಾಹಿತ್ಯವು ಆಯಾಯ ಭಾಷೆಯ ಮೂಲಕ ಬೆಳೆದರೆ ಮುಂದಿನ ತಲೆಮಾರಿಗೆ ಸಂಸ್ಕೃತಿ ಪ್ರಚಾರವಾಗಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿ ಶ್ರೀವತ್ಸ ವೇದಘೋಷ ನೆರವೇರಿಸಿದರು. ವಿದ್ಯಾರ್ಥಿನಿಯರಾದ ರಶ್ಮಿ ಬಿ., ಪವಿತ್ರಾ ಭಟ್ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ. ಭಟ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಕಾರ್ಯಕ್ರಮ ನಿರ್ವಹಿಸಿದರು.