ವಿವೇಕಾನಂದದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಆಡಿಷನ್ ಪ್ರಕ್ರಿಯೆ – ನಟನಾ ಕ್ಷೇತ್ರ ಕೆಟ್ಟದ್ದೆಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು : ದೀಪಕ್
ಪುತ್ತೂರು: ಧಾರಾವಾಹಿ, ಸಿನೆಮಾ ಮೊದಲಾದ ಕ್ಷೇತ್ರಗಳೆಂದರೆ ಅನೇಕರಿಗೆ ಅಸಡ್ಡ ಇದೆ. ಅದೊಂದು ಕೆಟ್ಟ ಕ್ಷೇತ್ರ ಎಂಬ ಭ್ರಮೆಗೆ ಒಳಗಾದವರಿದ್ದಾರೆ. ಇಂತಹ ತಪ್ಪು ಕಲ್ಪನೆಯಿಂದ ಹೊರಬರಬೇಕು. ವ್ಯಕ್ತಿಯಲ್ಲಿನ ಪ್ರತಿಭೆಯ ಅನಾವರಣಕ್ಕೆ ಇಂತಹ ಕ್ಷೇತ್ರಗಳು ಸಹಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳಭೇಕು ಎಂದು ಬೆಂಗಳೂರಿನ ಕಲರ್ಸ್ ಕನ್ನಡ ವಾಹಿನಿಯ ಮನರಂಜನಾ ಕಾರ್ಯಕ್ರಮ ವಿಭಾಗದ ನಿರ್ದೇಶಕ ದೀಪಕ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಲಲಿತ ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಕಲರ್ಸ್ ಕನ್ನಡ ವಾಹಿನಿಯ ಮುಂಬರುವ ಧಾರಾವಾಹಿಗಳಿಗಾಗಿನ ನಟ ನಟಿಯರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಆಯ್ಕೆ ಪ್ರಕ್ರಿಯೆಗಾಗಿ ಅನೇಕ ಕಾಲೇಜುಗಳನ್ನು ಸಂಪರ್ಕಿಸಲಾಗಿದೆ. ಕೆಲವು ಕಾಲೇಜುಗಳಲ್ಲಿ ಇದಕ್ಕೆ ಅವಕಾಶವೇ ಕಲ್ಪಿಸದಿರುವುದು ಅಚ್ಚರಿ ತಂದಿದೆ. ಇಂದಿನ ಯುವ ಸಮೂಹದಲ್ಲಿ ಅದಮ್ಯೌಆದ ಆಸಕ್ತಿ, ಸಾಮರ್ಥ್ಯ ಇದೆ. ಅದನ್ನು ಹೊರಜಗತ್ತಿಗೆ ಕಾಣಿಸುವ ಪ್ರಯತ್ನಕ್ಕೆ ಹೆತ್ತವರು, ಸಮಾಜ ಸಹಕರಿಸಬೇಕಾದ ಅವಶ್ಯಕತೆ ಇದೆ. ನಮ್ಮ ನಡುವೆಯೇ ಇರಬಹುದಾದ ಅದ್ಭುತ ಕಲಾವಿದನನ್ನು ಗುರುತಿಸದಿದ್ದರೆ ಅದರಿಂದ ನಟನಾ ಕ್ಷೇತ್ರಕ್ಕೇ ನಷ್ಟವಾಗುತ್ತದೆ. ಇದನ್ನು ನಾವೆಲ್ಲರ ಮನಗಾಣಬೇಕು ಎಂದರು.
ನಟನೆ ಎದರೆ ಕೇವಲ ವಾಕ್ಚಾತರ್ಯವಲ್ಲ. ಕೊಟ್ಟ ವಿಷಯವನ್ನು ಕೇವಲ ಗಿಣಿ ಪಾಠದಂತೆ ಒಪ್ಪಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಮುಖದ ಭಾವನೆ, ಒಟ್ಟಾರೆ ಅಬಿನಯ ಎಲ್ಲವೂ ನಟನೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ನಿರ್ಭಾವುಕವಾಗಿ ವ್ಯಕ್ತಪಡಿಸುವ ಮಾತುಗಳು ಯಾರನ್ನೂ ನಟ ನಟಿಯನ್ನಾಗಿ ರೂಪಿಸಲಾರವು. ಆದುದರಿಂದ ಮುಖದಲ್ಲಿ ಭಾವನೆ ಕಾಣಿಸುವ ಯತ್ನಕ್ಕೆ ಪ್ರತಿಯೊಬ್ಬರೂ ತೊಡಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಇಂದು ನಟನಾ ಕ್ಷೇತ್ರವೂ ಒಂದು ಅತ್ಯುತ್ತಮ ಉದ್ಯೋಗದಾತ ಕ್ಷೇತ್ರವೆನಿಸಿದೆ. ಃಆಗಾಗಿ ವಿದ್ಯಾರ್ಥಿಗಳು ಇಂತಹ ಆಯ್ಕೆ ಪ್ರಕ್ರಿಯೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಅದಾಗಲೇ ಸಾಕಷ್ಟು ಕಿರುಚಿತ್ರ ತಯಾರಿ, ಸಾಕ್ಷ್ಯ ಚಿತ್ರ ರಚನೆ ಮೊದಲಾದ ಕಾರ್ಯಗಳಲ್ಲಿ ತೊಡಗಿದ್ದಾರೆ. ಅನೇಕ ಪ್ರತಿಭಾನ್ವಿತ ವಿದ್ಯಾಥಿಗಳು ಕಾಲೇಜಿನಲ್ಲಿದ್ದಾರೆ ಎಂದರು.
ಅನೇಕರಲ್ಲಿ ನಟನೆಯ ಬಗೆಗಿನ ಸುಪ್ತವಾದ ಪ್ರತಿಭೆ ನೆಲೆಸಿರುತ್ತದೆ. ಅದನ್ನು ಹೊರಗೆಡಹುವ ಅವಕಾಶ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕಡಿಮೆ ಇದೆ. ಧಾರಾವಾಹಿ, ಸಿನೆಮಾ ಕ್ಷೇತ್ರಗಳು ಹೆಚ್ಚಾಗಿ ನಗರ ಕೇಂದ್ರಿತವಾಗಿವೆ. ಆದರೆ ಈಗೀಗ ವಿವಿಧ ವಾಹಿನಿಗಳು ರಾಜ್ಯದ ಮೂಲೆ ಮೂಲೆಗಳಲ್ಲೂ ಆಯ್ಕೆ ಪ್ರಕ್ರಿಯೆ ನಡೆಸುತ್ತಿರುವುದು ಸ್ವಾಗತಾರ್ಹ ವಿಚಾರ ಎಂದು ನುಡಿದರು.
ವೇದಿಕೆಯಲ್ಲಿ ಲಲಿತ ಕಲಾ ಸಂಘದ ಸಂಚಾಲಕಿ ಡಾ.ದುರ್ಗಾರತ್ನ, ಕಲರ್ಸ್ ಕನ್ನಡ ವಾಹಿನಿಯ ಉದ್ಯೋಗಿ ಸಾಗರ್ ಹೆಗ್ಡೆ ನಾರಾವಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಆರ್ ನಿಡ್ಪಳ್ಳಿ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಸಭಾಕಾರ್ಯಕ್ರಮದ ನಂತರ ದಿನಪೂರ್ತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು ಮುನ್ನೂರೈವತ್ತು ಮಂದಿ ವಿದ್ಯಾರ್ಥಿಗಳು ಹಾಗೂ ವಿವಿಧ ಕಡೆಗಳಿಂದ ಸ್ವಯಂ ಆಸಕ್ತಿಯಿಂದ ಬಂದ ನೂರಕ್ಕೂ ಮಿಕ್ಕ ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.