ಡಾ. ರೋಹಿಣಾಕ್ಷ ಶಿರ್ಲಾಲು ಕೃತಿಗೆ ಬೇಂದ್ರೆ ಗ್ರಂಥ ಪುರಸ್ಕಾರ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ಅವರ ಚೊಚ್ಚಲ ಕೃತಿ ’ ಸಾಹಿತ್ಯ ವಿಚಾರ’ ದಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಪ್ರತಿಷ್ಠಿತ ’ಬೇಂದ್ರೆ ಗ್ರಂಥ ಪುರಸ್ಕಾರ’ಕ್ಕೆ ಆಯ್ಕೆಯಾಗಿದೆ. ಸಂಶೋಧನೆ, ನಾಟಕ, ಕಾವ್ಯ ಮೊದಲಾದ ಎಂಟು ಪ್ರಕಾರದ ಸಾಹಿತ್ಯಕ್ಕೆ ನೀಡುವ ಈ ಪ್ರಶಸ್ತಿಯು, ಸಂಶೋದನಾ ಪ್ರಕಾರದಲ್ಲಿ ’ಸಾಹಿತ್ಯ ವಿಚಾರ’ ಕೃತಿಯು ಪುರಸ್ಕಾರಕ್ಕೆ ಪಾತ್ರವಾಗಿದೆ. ೨೦೧೫ರಲ್ಲಿ ಪ್ರಕಟವಾದ ಕನ್ನಡ ಕೃತಿಗಳಲ್ಲಿ ಪ್ರಸ್ತುತ ಕೃತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಕೃತಿಯು ಪ್ರಾಚೀನ ಸಾಹಿತ್ಯ, ಸಾಹಿತ್ಯ ಚರಿತ್ರೆ, ನಾಡು-ನುಡಿ ಪರಿಕಲ್ಪನೆಗೆ ಸಂಬಂಧಿಸಿದ ಮಹತ್ವದ ಎಂಟು ಸಂಶೋಧನಾ ಲೇಖನಗಳನ್ನು ಒಳಗೊಂಡಿದೆ. ಈ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಲೇಖಕರ ಚೊಚ್ಚಲ ಕೃತಿ ಪ್ರಕಟಣೆಗೆ ನೀಡುವ ಧನಸಹಾಯಕ್ಕೆ ಆಯ್ಕೆಯಾಗಿ ೨೦೧೫ ರಲ್ಲಿ ಚಿಂತನ ಬಯಲು ಪ್ರಕಾಶನದಿಂದ ಪ್ರಕಟವಾಗಿತ್ತು. ಗ್ರಂಥ ಪುರಸ್ಕಾರ ಸಮಾರಂಭವು ಜನವರಿ ೧೨ರಂದು ಧಾರವಾಡದಲ್ಲಿ ನಡೆಯಲಿದೆ.