ಬೆಳಕನ್ನು ಸಂರಕ್ಷಿಸಬೇಕಾದ ಅಗತ್ಯವಿದೆ : ಡಾ. ಎ.ಪಿ ರಾಧಾಕೃಷ್ಣ
ಪುತ್ತೂರು: ಬೆಳಕನ್ನು ಕಂಡು ಹಿಡಿಯಲು ಅಂದಿನ ವಿಜ್ಞಾನಿಗಳು ಪಟ್ಟ ಶ್ರಮವನ್ನು ನಾವು ಸ್ಮರಿಸಬೇಕಾದ ಅವಶ್ಯಕತೆ ಇದೆ. ಹಳ್ಳಿಗಳಲ್ಲಿ ರಾತ್ರಿಯ ಹೊತ್ತು ನಕ್ಷತ್ರವನ್ನೊಳಗೊಂಡ ಚಂದ್ರನನ್ನು ಕಾಣಬಹುದು. ಆದರೆ ಪಟ್ಟಣಗಳಲ್ಲಿ ಆ ಭಾಗ್ಯ ಅನೇಕ ಕಾರಣಗಳಿಂದ ಲಭಿಸುವುದಿಲ್ಲ ಎಂದು ಸಂತ ಫಿಲೋಮಿನ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಎ.ಪಿ ರಾಧಾಕೃಷ್ಣ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಿಜ್ಞಾನ ಸಂಘವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಅಂತರಾಷ್ಟ್ರೀಯ ಬೆಳಕಿನ ವರ್ಷವೆಂದು ಪರಿಗಣಿಸಲ್ಪಟ್ಟ ಈ ವರ್ಷ ಮಾತ್ರವಲ್ಲದೇ ಬರಲಿರುವ ಎಲ್ಲಾ ದಿನಗಳಲ್ಲಿಯೂ ಬೆಳಕನ್ನು ಸಂರಕ್ಷಿಸಬೇಕಾದ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸುವುದು ಅಗತ್ಯ. ಮಾನವನ ಜೀವನ ಇಂದು ಬೆಳಗಿದೆ ಎಂದರೆ ಅದಕ್ಕೆ ವಿಜ್ಞಾನದ ಆವಿಷ್ಕಾರಗಳೇ ಕಾರಣ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಬೆಳಕು ಪ್ರತಿಯೊಬ್ಬನ ಜೀವನದ ಅವಿಭಾಜ್ಯ ಅಂಗ. ಹಣತೆ ತಾನು ಉರಿದು ಜಗತ್ತಿಗೆ ಬೆಳಕನ್ನು ನೀಡುತ್ತದೆ. ಪರಹಿತ ಚಿಂತನೆಯ ಮಹತ್ವಕ್ಕೆ ಬೆಳಕು ಪ್ರತ್ಯಕ್ಷ ಸಾಕ್ಷಿ. ಪ್ರಸ್ತುತ ಕಾಲಘಟ್ಟದಲ್ಲಿ ಮೊಬೈಲ್, ಕಂಪ್ಯೂಟರ್ ವಿಜ್ಞಾನದ ಕೊಡುಗೆ ಎಂದರೆ ಬೆಳಕು, ಚಕ್ರ ವಿಜ್ಞಾನದ ಕೊಡುಗೆಗಳಲ್ಲಿ ಅತೀ ಮುಖ್ಯವಾದದ್ದು ಎಂದು ನುಡಿದರು.
ವಿಜ್ಞಾನ ಸಂಘದ ಅಧ್ಯಕ್ಷ ಗುರುಕೃಷ್ಣ ಸ್ವಾಗತಿಸಿ, ಕಾರ್ಯದರ್ಶಿ ನಿಶಾ ಪಿ. ವಂದಿಸಿದರು. ಬೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿನ ಪ್ರಸಾದ್ ಕೆ.ಯಸ್ ಪ್ರಸ್ತಾವಿಸಿ, ವಿದ್ಯಾರ್ಥಿನಿಯರಾದ ಸೌಮ್ಯ ಮತ್ತು ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.