ನ್ಯಾಶನಲ್ ಬುಕ್ಟ್ರಸ್ಟ್, ಇಂಡಿಯಾ ಸಲಹಾ ಮಂಡಳಿಗೆ ಡಾ.ರೋಹಿಣಾಕ್ಷ ಶಿರ್ಲಾಲು ಆಯ್ಕೆ
ಪುತ್ತೂರು: ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ’ನ್ಯಾಶನಲ್ ಬುಕ್ಟ್ರಸ್ಟ್, ಇಂಡಿಯಾ’ ದ ಕನ್ನಡ ಭಾಷಾ ವಿಷಯದ ತಜ್ಞರ ಸಲಹಾ ಮಂಡಳಿಗೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಪುಸ್ತಕ ಪ್ರಕಾಶನ, ಪುಸ್ತಕ ಪ್ರಚಾರ, ವಿವಿಧ ಭಷೆಗಳಲ್ಲಿ ಸ್ವತಂತ್ರ ಹಾಗೂ ಅನುವಾದಿತ ಕೃತಿಗಳನ್ನು ಪ್ರಕಟಿಸುವುದನ್ನು ಪ್ರಮುಖ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ನ್ಯಾಶನಲ್ ಬುಕ್ಟ್ರಸ್ಟ್, ಇಂಡಿಯಾಕನ್ನಡ ಭಾಷೆಯಲ್ಲಿನ ಕೃತಿಗಳ ಪ್ರಕಟಣೆ, ಅನುವಾದ ಕಾರ್ಯಕ್ಕೆ ಸಲಹೆ, ಮಾರ್ಗದರ್ಶನದ ಮೂಲಕ ಯೋಜನೆಗಳನ್ನು ಸಿದ್ಧಪಡಿಸಿ, ಅಂತಿಮರೂಪ ನೀಡುವ ಕನ್ನಡ ಭಾಷೆ, ಸಾಹಿತ್ಯ ವಲಯದ ವಿಷಯತಜ್ಞರ ಸಲಹಾ ಮಂಡಳಿಯನ್ನು ನೂತನವಾಗಿ ಪುನರ್ರಚಿಸಲಾಗಿದೆ. ಈಗಾಗಲೇ ಎರಡು ಸಂಶೋಧನಾ ಕೃತಿಗಳನ್ನು ಹಾಗೂ ಅನೇಕ ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಡಾ.ರೋಹಿಣಾಕ್ಷ ಶಿರ್ಲಾಲು ಅವರನ್ನು ಈ ನೂತನ ಸಲಹಾ ಮಂಡಳಿಗೆ ಸದಸ್ಯರನ್ನಾಗಿ ನ್ಯಾಶನಲ್ ಬುಕ್ಟ್ರಸ್ಟ್ ನೇಮಿಸಿದೆ.