VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಗುರಿ ಸಾಧನೆಗೆ ಆತ್ಮವಿಶ್ವಾಸ, ಸಮಯ ನಿಷ್ಠೆ, ಏಕಾಗ್ರತೆ ಅತೀ ಅಗತ್ಯ: ರೋಹನ್ ಜಗದೀಶ್ IPS

ಪುತ್ತೂರು: ಜೀವನದಲ್ಲಿ ಒಂದು ನಿರ್ದಿಷ್ಠ ಗುರಿಯನ್ನು ತಲುಪಬೇಕು ಅನ್ನುವ ಕನಸಿದ್ದರೆ ಸಾಧಿಸುವ ಛಲ ಹಾಗೂ ದೃಢತೆ ಇರಬೇಕು. ಗುರಿಯನ್ನು ತಲುಪಲು ತನ್ನಿಂದ ಸಾಧ್ಯ ಅನ್ನುವ ಆತ್ಮವಿಶ್ವಾಸದ ಜೊತೆಗೆ ಸಮಯ ನಿಷ್ಠೆ ಹಾಗೂ ಏಕಾಗ್ರತೆ ಇರುವುದು ಅತ್ಯಗತ್ಯ ಎಂದು ಐ.ಪಿ.ಎಸ್. ಅಧಿಕಾರಿ ರೋಹನ್ ಜಗದೀಶ್ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಇವರ ಆಶ್ರಯದಲ್ಲಿ ನಡೆದ ‘ಜೀವನ ಕೌಶಲ್ಯ’ ಸರ್ಟಿಫಿಕೇಟ್ ಕೋರ್ಸ್ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?’ ಎಂಬ ಕುರಿತಾಗಿ ಮಾಹಿತಿ ನೀಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ತುಂಬಾ ಇದೆ. ಈ ಸಂದರ್ಭ ಸೋಲುವ ಭಯದಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಸೋಲು ಅನ್ನುವುದು ಕೊನೆಯಲ್ಲ, ಅದು ಜೀವನದ ತಿರುವಿನ ಆರಂಭ. ಒಮ್ಮೆ ಸೋತರೆ ಮತ್ತೆ ಗೆಲ್ಲುವೆ ಅನ್ನುವ ಧನಾತ್ಮಕ ಭಾವನೆಯೊಂದಿಗೆ ಪ್ರಯತ್ನಿಸಬೇಕು. ಪ್ರಯತ್ನದ ಜೊತೆಗೆ ತನ್ನ ಗುರಿಯ ಬಗ್ಗೆ ನಿಶ್ಚಿತವಾಗಿರಬೇಕು. ಹೊಸತನವನ್ನು ಹುಡುಕಿಕೊಂಡು ಹೋದಾಗ ಅಡೆತಡೆಗಳು ಸಿಗುವುದು ಸಾಮಾನ್ಯ. ಅದನ್ನು ಮೀರಿಸಿ ಮುಂದೆ ಹೋಗುವಷ್ಟು ಹಠ ಹಾಗೂ ಆಸಕ್ತಿ ನಮ್ಮಲ್ಲಿರಬೇಕು. ನಮಗೆ ತೃಪ್ತಿ ಸಿಗುವಷ್ಟು ಉತ್ತಮವಾಗಿ ನಮ್ಮ ಪ್ರಯತ್ನವಿರಬೇಕು ಎಂದು ನುಡಿದರು.
ಪೋಲೀಸ್ ಅಧಿಕಾರಿಗಳು ಅಂದರೆ ಭಯವಿರಬಾರದು. ಅವರ ಮೇಲೆ ಭರವಸೆ ಇರಬೇಕು. ಸಿನಿಮಾದಲ್ಲಿ ತೋರಿಸಿದಂತೆ ಪೋಲಿಸರು ವರ್ತಿಸುವುದಿಲ್ಲ. ಅವರು ಸಮಾಜದ ಶಾಂತಿಸುವ್ಯವಸ್ಥೆಯ ಕಾರ್ಯಗಳನ್ನು ನಿಭಾಯಿಸುತ್ತಾರೆ ಎಂದರು.
ಕಿರಿಯ ವಯಸ್ಸಿನಲ್ಲಿಯೇ ಉತ್ತಮ ಸಾಧನೆಗೈದ ರೋಹನ್ ಜಗದೀಶ್ ಐ.ಪಿ.ಎಸ್. ಅವರಿಗೆ ಕಾಲೇಜು ಹಾಗೂ ಕಾರ್ಯಕ್ರಮದ ವತಿಯಿಂದ ಗೌರವ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಡಾ. ಶ್ರೀಶ ಭಟ್, ಕಾಲೇಜಿನ ಐಕ್ಯುಎಸಿ ಸಂಯೋಜಕ ಪ್ರೊ. ಶಿವಪ್ರಸಾದ್. ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಮೊದಲಾದವರು ಉಪಸ್ಥಿತರಿದ್ದರು. ‘ಜೀವನ ಕೌಶಲ್ಯ’ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.