ಕುರ್ತಕೋಟಿ ಸಾಹಿತ್ಯಲೋಕ ಕಂಡ ಪ್ರತಿಭಾನ್ವಿತ : ಡಾ.ಜಿ.ಬಿ.ಹರೀಶ್
ಪುತ್ತೂರು: ಕೀರ್ತಿನಾಥ ಕುರ್ತಕೋಟಿಯವರು ಸ್ವಸ್ಥಾನ ಪರಿಚಯವುಳ್ಳ ವಿಮರ್ಶಕರು. ಜೀವನದಲ್ಲಿ ಸಾಹಿತ್ಯ ಕ್ಷೇತ್ರದ ಸಾರ್ಥಕತೆಗಾಗಿ ವೈಯುಕ್ತಿಕ ಜೀವನವನ್ನು ಧಾರೆ ಎರೆದವರು. ಎಂದು ಸಾಹಿತ್ಯ ವಿಮರ್ಶಕ ಡಾಜಿ.ಬಿ.ಹರೀಶ್ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ದತ್ತಿ ಉಪನ್ಯಾಸ ಮಾಲೆ-೨ ಕಾರ್ಯಕ್ರಮದಲ್ಲಿ ’ಕೀರ್ತಿನಾಥ ಕುರ್ತಕೋಟಿಯವರ ವಿಮರ್ಶೆಯ ಒಳನೋಟಗಳು’ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.
ಕುರ್ತಕೋಟಿಯವರ ಓದಿನಶಕ್ತಿ ಅಪಾರವಾಗಿದ್ದು ಅವರಿಗೆ ಸಾಹಿತ್ಯವೇ ಹೃದಯ ಕಳಶವಾಗಿತ್ತು. ಸ್ವಪ್ರೇರಣೆಯಿಂದ ಹೆಗಲೇರಿದ ಸಾಹಿತ್ಯವನ್ನು ಸಾಂದರ್ಭಿಕ ಅವಶ್ಯಕತೆಗಳೊಂದಿಗೆ ರೂಪಿಸಿಕೊಂಡವರು ಎಂಬುದು ವಿಶೇಷ. ಬೇಂದ್ರೆಯವರ ಕಾವ್ಯವನ್ನು ಮಾನದಂಡವಾಗಿಟ್ಟು ಇತರ ಕವಿಗಳನ್ನು ಗಮನಿಸುವ ಪ್ರಯತ್ನವನ್ನು ಕುರ್ತಕೋಟಿ ನಡೆಸಿದ್ದು, ಕೃತಿಯೊಳಗೆ ಅಂತರ್ಗತವದ ಸಂಸ್ಕೃತಿ ಹಾಗು ಕೃತಿಯನ್ನು ತುಲನೆ ಮಾಡುವ ರೀತಿ ಅವರಲ್ಲಿ ಅತ್ಯುತ್ತಮವಾಗಿತ್ತು ಎಂದು ನುಡಿದರು.
ನವ್ಯ ಸಾಹಿತ್ಯದಿಂದ ಹೊರಬಂದ ನಂತರ ಬೇಂದ್ರೆಯವರ ಕುರಿತಾಗಿ ಗಮನ ಹರಿಸಿದ ಕುರ್ತಕೋಟಿಯವರು ನಂತರದಲ್ಲಿ ಸಂಪೂರ್ಣ ಸಾಹಿತ್ಯದ ಕುರಿತಾಗಿ ಗಮನ ಹರಿಸತೊಡಗಿದರು. ಅನುವಾದ ಎಂಬುದು ಕೀಳಲ್ಲ. ಅದನ್ನು ಒಂದು ಬರೆಯುವ ವೈಖರಿಯಾಗಿ ಸ್ವೀಕರಿದವರು ಅವರು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಮಾತನಾಡಿ ಕುರ್ತಕೋಟಿಯವರು ನಡೆದು ಬಂದ ದಾರಿಯನ್ನೊಮ್ಮೆ ಗಮನಿಸಿದರೆ ಸಂಸ್ಕೃತಿಯ ಕುರಿತಾಗಿ ಅವರಲ್ಲಿದ್ದ ಒಲವನ್ನು ಅರಿತುಕೊಳ್ಳಲು ಸಾಧ್ಯ. ಧರ್ಮ ಜೀವನ ಭಾರತಕ್ಕೆ ಬಲು ಅವಶ್ಯಕವಾದುದು. ಅವರು ಸಾಹಿತ್ಯವನ್ನು ಅರಿಯುವಲ್ಲಿ ಜನರ ಗೊಂದಲವನ್ನು ಪರಿಹರಿಸಿದವರು ಎಂದು ನುಡಿದರು.
ವಿದ್ಯಾರ್ಥಿನಿ ಮೇಘಾ ಕುಕ್ಕುಜೆ ಪ್ರಾರ್ಥಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಡಾ.ವರದರಾಜ ಚಂದ್ರಗಿರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ ಶ್ರೀಧರ್ ವಂದಿಸಿದರು. ವಿಭಾಗದ ಉಪನ್ಯಾಸಕಿಯರಾದ ಗೀತಾಕುಮಾರಿ ಮತ್ತು ರತ್ನಾವತಿ ನಿರೂಪಿಸಿದರು.