VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿನಲ್ಲಿ ‘ಸಂಶೋಧನಾ ಮಾರ್ಗದರ್ಶನ ಘಟಕ’ ಉದ್ಘಾಟನೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು : ಪ್ರೊ. ಎ. ಎಮ್. ನರಹರಿ

ಪುತ್ತೂರು ಫೆ. ೯: ನಮ್ಮ ಕಾಲೇಜುಗಳಲ್ಲಿ ಕಲಿಕಾ–ಬೋಧನಾ ಕ್ರಮಗಳು ಬದಲಾಗಬೇಕು. ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಉನ್ನತ ಶಿಕ್ಷಣದಲ್ಲಿ ಸಂಶೋಧನಾತ್ಮಕ ಕಲಿಕೆಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಸಂಶೋಧನೆ ಎಂದರೆ ಹೊಸ ಆವಿಷ್ಕಾರ, ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಪದವಿ ವಿದ್ಯಾರ್ಥಿಗಳಿಗೆ ದೊಡ್ಡ ಮಾತಾಗುತ್ತದೆ. ಬದಲಿಗೆ ಚಿಕ್ಕ, ಚಿಕ್ಕ ವಿಷಯಗಳನ್ನು ಆರಿಸಿಕೊಂಡು ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳೇ ಸ್ವಯಂ ಅಧ್ಯಯನ ಮಾಡಿ ಕಲಿತುಕೊಳ್ಳುವ ವಿಧಾನ ಅವರ ಆತ್ಮವಿಶ್ವಾಸ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದು ಪ್ರೊಜೆಕ್ಟ್, ಪ್ರಬಂಧ, ಲೇಖನ, ಅನುಭವಾತ್ಮಕ ಕಲಿಕೆ ಏನು ಬೇಕಾದರೂ ಆಗಿರಬಹುದು ಎಂದು ಮಂಗಳೂರಿನ ಸೈಂಟ್ ಆಲೋಷಿಯಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ. ಎಮ್. ನರಹರಿ ಹೇಳಿದರು.


ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯುಎಸಿ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಶೋಧನ ಮಾರ್ಗದರ್ಶನ ಘಟಕವನ್ನು ಉದ್ಘಾಟಿಸಿ, ಮಂಗಳವಾರ ಅವರು ಮಾತನಾಡಿದರು.
ಬರೀ ಪಾಠ ಮಾಡಿ, ಪರೀಕ್ಷೆಗಳಿಗೆ ತಯಾರು ಮಾಡುವ ಕಾಲಘಟ್ಟದಲ್ಲಿ ನಾವಿಲ್ಲ. ಜ್ಞಾನದ ಪ್ರಸರಣೆ ಜೊತೆಗೆ ಹೊಸ ಜ್ಞಾನ ಸೃಷ್ಟಿ ಮಾಡುವಂತಹ ಕಾಲ ಇದು. ನಾವೆಲ್ಲಾ ಹಳೆ ಪದ್ಧತಿಯಲ್ಲಿ ಕಲಿತು ಬರಲಿಲ್ಲವೇ ಎಂದು ಕೆಲವರು ಪ್ರಶ್ನೆ ಹಾಕುತ್ತಾರೆ. ಮಾಹಿತಿ ಸ್ಪೋಟದ ಯುಗದಲ್ಲಿ ನಾವೂ ಬದಲಾಗಿದ್ದೇವೆ. ನಿವೃತ್ತಿಯಾದ ನಂತರವೂ ಕಲಿಯುತ್ತಿದ್ದೇವೆ. ಮಕ್ಕಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿ ಅವಕಾಶಗಳನ್ನು ಸೃಷ್ಟಿಸಿ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರುಳಿಕೃಷ್ಣ ಕೆ.ಎನ್. ಮಾತನಾಡಿ, ಕಾಲೇಜಿನ ಯಶಸ್, ಭವಿಷ್ ಹಾಗೂ ವಿಕಾಸ ಘಟಕದ ಸಾಲಿಗೆ ಸಂಶೋಧನ ಮಾರ್ಗದರ್ಶನ ಘಟಕವು ಸೇರ್ಪಡೆಗೊಂಡಿರುವುದು ಹೆಮ್ಮೆ ತರುವಂತಹ ವಿಷಯ. ಈ ಎಲ್ಲಾ ಘಟಕಗಳು ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಿದೆ, ವಿದ್ಯಾರ್ಥಿಗಳು ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಜಿ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿ, ಸಂಶೋಧನ ಮಾರ್ಗದರ್ಶನ ಘಟಕದ ಸಂಯೋಜಕ ಡಾ. ಶ್ರೀಧರ ಎಚ್.ಜಿ. ಸ್ವಾಗತಿಸಿ, ಐಕ್ಯುಎಸಿ ಘಟಕದ ಸಂಯೋಜಕ ಶಿವಪ್ರಸಾದ್ ವಂದಿಸಿ, ಉಪನ್ಯಾಸಕ ಮುಕುಂದ ಕೃಷ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.