VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಸಾಹಿತ್ಯಕ್ಕೆ ಸಂಗೀತ ಬೆರೆತಾಗ ಅದರ ಸೊಬಗು ಹೆಚ್ಚುತ್ತದೆ : ನಂದಿನಿ

ಪುತ್ತೂರು : ನಮ್ಮ ಭಾವನೆಗಳಿಗೆ ಪದಗಳ ರೂಪ ಕೊಟ್ಟಾಗ ಅದುವೇ ಸಾಹಿತ್ಯವಾಗುತ್ತದೆ. ಸಾಹಿತ್ಯದೊಂದಿಗೆ ಸಂಗೀತ ಬೆರೆತಾಗ ಅದರ ಸೊಬಗು ಹೆಚ್ಚಾಗುತ್ತದೆ. ಬರವಣಿಗೆ ಹಾಗೂ ಅದರ ಸೊಬಗಿನೊಂದಿಗೆ ನಮ್ಮತನ ಎಂಬುದನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ  ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ನಂದಿನಿ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ -ಸಾಹಿತ್ಯ ಪ್ರಿಯ ಮನಗಳ ಸಂಮಿಲನ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪಾಲ್ಗೊಂಡು ಮಂಗಳವಾರ ಮಾತನಾಡಿದರು.

ಬಾಲ್ಯದಲ್ಲಿ ರಚಿಸಿದ ಸಾಹಿತ್ಯಕ್ಕೆ ಬಾಲಿಶತೆಯ ಲೇಪನವಿರುತ್ತದೆ. ಪ್ರೌಢಶಾಲಾ- ಪದವಿಪೂರ್ವ ತರಗತಿಗೆ ಬಂದಾಗ ನಮ್ಮೊಂದಿಗೆ ನಮ್ಮ ಬರವಣಿಗೆಯೂ ಬೆಳೆಯುತ್ತದೆ. ಪದವಿ ಹಂತ ವಿಷೇಷವಾದದ್ದು. ಆಗ ನಾವೂ ನಮ್ಮ ರಚನೆಗಳು ಎರಡೂ ಪ್ರೌಢತೆಯ ಹಾದಿಯಲ್ಲಿರುತ್ತದೆ. ನಮ್ಮ ರಚನೆಗೆ ಸ್ವಂತಿಕೆಯನ್ನು ಬೆರೆಸಿ ಬರೆಯುತ್ತಾ ಹೋದಂತೆ ಪಕ್ವಗೊಳ್ಳುತ್ತಾ ಹೋಗುತ್ತೇವೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ  ಉಪನ್ಯಾಸಕಿ ಡಾ. ಗೀತಾ ಕುಮಾರಿ ಮಾತನಾಡಿ, ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಾಗ ಬೆಳೆಯಲು ಸಾಧ್ಯವಾಗುತ್ತದೆ. ಪದವಿ ತರಗತಿಗಳಲ್ಲಿ ಯಥೇಚ್ಛವಾದ ಅವಕಾಶಗಳು ಪಠ್ಯೇತರ ಚಟುವಟಿಕೆಗಳಿಂದ ದೊರೆಯುತ್ತದೆ. ಯಾರಾದರೂ ನಮ್ಮ ಬರವಣಿಗೆಯನ್ನು ವಿಮರ್ಶಿಸಿ ಮಾತನಾಡಿದಾಗ ಅದನ್ನು ಪ್ರೋತ್ಸಾಹದ ಮಾತುಗಳಾಗಿ ಸ್ವೀಕರಿಸಬೇಕೇ ವಿನಃ, ಋಣಾತ್ಮಕವಾಗಿ ಅಲ್ಲ. ಇಂತಹ ವಿಮರ್ಶೆಗಳು ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್, ಸಾಹಿತ್ಯ ಮಂಟಪದ  ಸಂಯೋಜಕ ಡಾ. ಮನಮೋಹನ, ಸಾಹಿತ್ಯ ಮಂಟಪ ಕಾರ್ಯದರ್ಶಿ ಶ್ರೀನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರೀತಮ್, ಪೂಜಾ ಕೆ. ಸ್ವರಚಿತ ಕಥೆಗಳನ್ನು ವಾಚಿಸಿದರು. ಅಂತಿಮ ಪದವಿ ವಿದ್ಯಾರ್ಥಿನಿ ರೇಖಾ ಸ್ವಾಗತಿಸಿ, ವಿದ್ಯಾರ್ಥಿನಿ ಶ್ಯಾಮಲಾ ವಂದಿಸಿದರು. ವಿದ್ಯಾರ್ಥಿ ಶಿವಶಂಕರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.