ರಾಮರಕ್ಷಾ ಪಠಣದಿಂದ ಮನಸ್ಸಿಗೆ ನೆಮ್ಮದಿ: ಶಿವರಾಮ ಭಟ್
ಪುತ್ತೂರು: ರಾಮರಕ್ಷಾ ರಾಮಾಯಣದ ಮಹತ್ವವನ್ನು ತಿಳಿಸುತ್ತದೆ. ಕರ್ಕಾಟಕ ಮಾಸ ಎಂಬುದು ಬಹಳ ಕಷ್ಟಕರವಾದ ಕಾಲ. ಇದು ರಾಮಾಯಣದ ಮಾಸ ಎಂದೇ ಪ್ರಸಿಧ್ಧವಾಗಿದೆ. ಮನಸ್ಸಿನ ನೆಮ್ಮದಿಗಾಗಿ ರಾಮಾಯಣದ ಪಾರಾಯಣ ಮಾಡಬೇಕು ಎಂದುಸ್ವಗ್ದ ಸ್ವಾಮಿ ವಿವೇಕಾನಂದ ಪಿ. ಯು.ಸಿ. ಕಾಲೇಜಿನ ಸಂಸ್ಕೃತ ಅಧ್ಯಾಪಕ ಶಿವರಾಮ ಭಟ್ ಕೆ. ನುಡಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಹಾಗೂ ವಿಕಾಸಂ ಸಂಸ್ಕೃತ ಸಂಘದ ವತಿಯಿಂದ ಆಯೋಜಿಸಲಾದ ಶ್ರೀರಾಮರಕ್ಷಾ ಸ್ತೋತ್ರ ಸಹಸ್ರ ಪಠಣದ ಭಗವದರ್ಪಣ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಂಗಳವಾರ ಮಾತನಾಡಿದರು.
ರಾಮರಕ್ಷಾ ಪಾರಾಯಣದಿಂದ ಆರೋಗ್ಯ ಸಿಗುತ್ತದೆ, ಮನದ ಇಚ್ಛೆ ನೆರವೇರುತ್ತದೆ. ಇದರಿಂದ ದೊರಕುವ ಫಲ ಅಶ್ವಮೇಧ ಯಾಗಕ್ಕಿಂತಲೂ ಮಿಗಿಲಾದುದು. ಪ್ರತಿ ಆಚರಣೆಯ ಹಿಂದೆ ಒಂದು ಪ್ರಮುಖವಾದ ಕಾರಣವಿರುತ್ತದೆ. ಆಚರಣೆ ಎಂದರೆ ಮೂಡನಂಬಿಕೆಯಲ್ಲ. ಮಂತ್ರಗಳ ಪಠಣದಿಂದ ಉತ್ತಮವಾದ ತರಂಗವೇರ್ಪಟ್ಟು ಕಂಪನವುಂಟಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ, ವಿಕಾಸಂ ಸಂಘದ ಅಧ್ಯಕೆ ಸಾಯಿ ಶ್ರೀಪದ್ಮಾ, ಕಾರ್ಯದರ್ಶಿ ಶ್ರೀಕಾಂತ್, ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಪೂರ್ವ ಸ್ವಾಗತಿಸಿ, ಪವನ್ ವಂದಿಸಿದರು. ಗೋವಿಂದ ಕಾರ್ಯಕ್ರಮ ನಿರ್ವಹಿಸಿದರು.