ಪ್ರಕೃತಿಗೆ ವನ್ಯಜೀವಿಗಳು ಅತೀ ಅಗತ್ಯ : ಹರೀಶ್ ಭಟ್
ಪುತ್ತೂರು: ವನ್ಯಜೀವಿಗಳ ಗಣತಿ ಕಷ್ಟಕರವಾಗಿದ್ದರೂ ಇದರಿಂದ ವನ್ಯಜೀವಗಳಲ್ಲಿರುವ ಪ್ರಭೇದ ಮತ್ತು ಸಂಖ್ಯೆಯನ್ನು ನಿರ್ಧರಿಸುವ ಮೂಲಕ ಅಳಿವಿನಂಚಿನಲ್ಲಿ ಇರುವ ಪ್ರಭೇದವನ್ನು ಗುರುತಿಸಿ ಅದನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ಮಾನವನನ್ನು ಹೊರತು ಪಡಿಸಿ ಇತರ ಎಲ್ಲಾ ಜೀವಿಗಳು ಪ್ರಾಕೃತಿಕ ಸಮತೋಲನಕ್ಕಾಗಿ ಶ್ರಮಿಸುತ್ತದೆ ಎಂದು ಬೆಂಗಳೂರಿನ ಇ.ಡಬ್ಲ್ಯೂ.ಆರ್.ಜಿ ಮತ್ತು ಸಿ.ಇ.ಎಸ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿಜ್ಞಾನಿ ಹರೀಶ್ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ನೇಚರ್ ಕ್ಲಬ್ನ ಆಶ್ರಯದಲ್ಲಿ ನಡೆದ ಎರಡು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ವನ್ಯಜೀವಿ ಸಂರಕ್ಷಣೆ ಎಂಬ ವಿಷಯದ ಕುರಿತಾಗಿ ಶನಿವಾರ ಮಾತನಾಡಿದರು.
ಮಾನವನ ಸ್ವಾರ್ಥ ಬದುಕು ಪ್ರಕೃತಿಯ ಮೇಲೆ ವಿಷವಾಗಿ ಪರಿಣಮಿಸಿರುವುದಕ್ಕೆ ಬೆಂಗಳೂರು ಮಹಾನಗರವೇ ಪ್ರತ್ಯಕ್ಷ ಸಾಕ್ಷಿ. ಆಮ್ಲಜನಕದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಕೆಟ್ಟ ವಾತಾವರಣ ರೂಪುಗೊಂಡಿದೆ. ಮಾತ್ರವಲ್ಲದೇ ರಾಜ್ಯದ ವೃಕ್ಷವೆಂದೇ ಕರೆಸಿಕೊಂಡಿರುವ ಶ್ರೀಗಂಧದ ಮರದ ರಕ್ಷಣೆ ಅಸಾಧ್ಯವೆಂಬಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಅತೀ ಅಲ್ಪಾವಧಿ ಜೀವಿಸುವ ಚಿಟ್ಟೆಗಳು ಎಲ್ಲರ ಆಕರ್ಷಣೆಗೆ ಪಾತ್ರವಾಗುತ್ತದೆ. ಈ ಹಿನ್ನಲೆ ಚಿಟ್ಟೆಗಳೂ ಮಾನವನಿಗೆ ಮಾದರಿಯಾಗುತ್ತದೆ. ಜೀವಿತಾವಧಿ ಕಾಲ ಮುಖ್ಯವಲ್ಲ, ಹೇಗೆ ಬದುಕನ್ನು ಸಾರ್ಥಕ ಪಡಿಸಿದ್ದೇವೆ ಎಂಬುದು ಮುಖ್ಯ. ಮಾತ್ರವಲ್ಲದೇ ಹಲವಾರು ಔಷಧಿಯ ಸಸ್ಯ ಸಂಪತ್ತು ಅಳಿವಿನಂಚಿಗೆ ತಲುಪಿದ್ದು, ಅದರ ಸಂರಕ್ಷಣೆಯೂ ಅತೀ ಅಗತ್ಯ ಎಂದು ನುಡಿದರು.
ವನ್ಯಪ್ರಪಂಚದ ವಿವಿಧ ಬಗೆಯ ಪ್ರಭೇದಗಳನ್ನು ಕಂಡುಹಿಡಿಯಲು ಗಣತಿಯ ಅವಶ್ಯಕತೆ ಇರುವಂತೆ ಜನಗಣತಿಯಿಂದ ರಾಜಕೀಯ ವ್ಯವಸ್ಥೆಗೆ ಮಾತ್ರವಲ್ಲದೇ ಅಳಿವಿನಂಚಿನಲ್ಲಿರುವ ಆದಿವಾಸಿ ಜನಾಂಗಗಳ ಕುರಿತಾಗಿ ಅಧ್ಯಯನ ಮಾಡಲು ಸಹಕಾರಿಯಾಗಿದೆ. ಈ ತೆರೆನಾದ ಅಧ್ಯಯನದಿಂದಲಾಗಿ ನಶಿಸುತ್ತಿರುವ ಪ್ರಭೇದವನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಬೆಂಗಳೂರಿನ ಐ.ಐ.ಎಸ್.ಸಿ ಯ ಪಕ್ಷಿತಜ್ಞ ವೃಜುಲಾಲ್ ಹಾಗೂ ಚಿಟ್ಟೆ ತಜ್ಞ ಚತುರ್ವೇದಿ ಶೇಟ್ ಉಪಸ್ಥಿತರಿದ್ದರು. ನೇಚರ್ ಕ್ಲಬ್ನ ಸಂಯೋಜಕ ದೇವಿಪ್ರಸಾದ ಕೆ.ಎನ್ ಸ್ವಾಗತಿಸಿ, ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಎಸ್ ವಂದಿಸಿದರು. ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು.