ಪುತ್ತೂರು ಸೆ. 23: ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕದ ಹೊರತಾಗಿ, ಉದ್ಯೋಗಕ್ಕೆ ಸಂಬAಧಪಟ್ಟ ವಿಶೇಷ ಕೌಶಲ್ಯಗಳನ್ನು ಬೆಳೆಸಬೇಕು. ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಠಿಣ ಶ್ರಮದ ಅಗತ್ಯವಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಗಾರಗಳು ಉದ್ಯೋಗವನ್ನು ಪಡೆಯಲು ಸಹಕಾರಿಯಾಗಿದೆ ಎಂದು ಆಕಾಂಕ್ಷಾ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಶ ಭಟ್ ಉದ್ಯೋಗ ಕೌಶಲ್ಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ(ಸ್ವಾಯತ್ತ) ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಮತ್ತು ಕಾಲೇಜಿನ ಪ್ಲೇಸ್ಮೆಂಟ್ ಆಂಡ್ ಟ್ರೈನಿಂಗ್ ಸೆಲ್ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ 23ರಿಂದ 29ರವರೆಗೆ ನಡೆಯುವ ಕೌಶಲ್ಯವರ್ಧನೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಕೌಶಲ್ಯ ವರ್ಧನೆಯ ಕಾರ್ಯಗಾರಗಳು ವಿದ್ಯಾರ್ಥಿಗಳ ಕೌಶಲ್ಯವನ್ನು ವರ್ಧನೆ ಮಾಡುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಭಾಗವಹಿಸಿ, ಅನುಭವವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ. ಎನ್ ಮಾತನಾಡಿ, ನಾವೆಲ್ಲರೂ ಹನುಮಂತನ ಕುಲದವರು. ಹಾಗಾಗಿ ಸಹಜವಾಗಿಯೇ ನಮ್ಮೊಳಗೆ ಕೌಶಲ್ಯ ಅಡಗಿಕೊಂಡಿದೆ. ಆದರೆ ಅದನ್ನು ಗುರುತಿಸುವಂತ ಕೆಲಸವಾದಾಗ ಮಾತ್ರ ಕೌಶಲ್ಯ ಪ್ರಪಂಚದಲ್ಲಿ ಅಭಿವ್ಯಕ್ತಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ಲೇಸ್ಮೆಂಟ್ ಆಂಡ್ ಟ್ರೈನಿಂಗ್ ಸೆಲ್ ನ ಸಂಚಾಲಕಿ ರೇಖಾ ಸ್ವಾಗತಿಸಿ, ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ್ಯೆ ಡಾ. ವಿದ್ಯಾ ಕೆ. ಎನ್ ನಿರೂಪಿಸಿದರು.