
ಪುತ್ತೂರು: ರಾಮನನ್ನು ನಾವು ಸದಾ ನೆನಪಿಡಬೇಕಾದ
ಅಗತ್ಯವಿದೆ. ಎಲ್ಲಾ ರೀತಿಯಿಂದ ನೋಡಿದಾಗಲೂ ರಾಮ ನಮಗೆ
ಆದರ್ಶವಾಗಿ ಕಾಣುತ್ತಾನೆ. ಹಿಂದೂಗಳು ಸ್ವಧರ್ಮದ ಬಗ್ಗೆ
ಅಭಿಮಾನವನ್ನು ಎಂದಿಗೂ ಹೊಂದಿರಬೇಕು. ವಿದೇಶೀಯರು
ಕೂಡಾ ಇಲ್ಲಿನ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಿಂದ ಆಕರ್ಷಿತರಾಗಿ
ಭಾರತಕ್ಕೆ ಬರುತ್ತಿದ್ದಾರೆ. ಹಾಗಿದ್ದಾಗ ನಾವು ನಮಗೆ ನೆಲೆ
ಕಲ್ಪಿಸಿದ ದೇಶದ ಅಭಿವೃದ್ಧಿಗಾಗಿ ಪಣತೊಡಬೇಕು. ಹಾಗೆಯೇ
ನಮ್ಮ ದೇಶವೇ ನಮಗೆ ಮೊದಲ ಆದ್ಯತೆಯಾಗಲಿ ಎಂದು
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ
ಡಾ. ಕಲ್ಲಡ್ಕ ಪ್ರಭಾಕರ ಭಟ್ ನುಡಿದರು.
ಇವರು ಪುತ್ತೂರಿನ ಕಲಾ, ವಿಜ್ಞಾನ, ವಾಣಿಜ್ಯ
ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಸ್ನಾತಕೋತ್ತರ ಅಧ್ಯಯನ
ಹಾಗೂ ಸಂಶೋಧನಾ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು
ಲಲಿತ ಕಲೆಗಳ ಅಧ್ಯಯನ ಕೇಂದ್ರ , ವಿದ್ಯಾರ್ಥಿ ಸಂಘ ಹಾಗೂ
ಐಕ್ಯುಎಸಿಯ ಸಹಯೋಗದಲ್ಲಿ ನಡೆದ ಅಯೋಧ್ಯೆಯ ರಾಮನ
ಪ್ರಾಣ ಪ್ರತಿಷ್ಠಾಪನೆಯ ಮೂರನೇ ವರ್ಷದ ವಾರ್ಷಿಕೋತ್ಸವ
ರಾಮೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅಯೋಧ್ಯೆಯ
ಕರಸೇವೆಯಲ್ಲಿ ಭಾಗವಹಿಸಿದ್ದ ಮೀನಾಕ್ಷಿ ಮಾತಾಜಿ ಅಯೋಧ್ಯೆ
ಕರಸೇವೆಯಲ್ಲಿ ಪುರುಷರಿಗಷ್ಟೇ ಅಲ್ಲದೇ ಮಹಿಳೆಯರಿಗೂ
ಅವಕಾಶವಿತ್ತು. ಯಾರು ಮುಂದಿನ ಪೀಳಿಗೆ ಹೆಮ್ಮೆ ಹಾಗೂ
ಸ್ವಾಭಿಮಾನದಿಂದ ಬದುಕುವಂತೆ ಮಾಡುತ್ತಾರೋ ಅವರ ಜೀವನ
ಸಾರ್ಥಕ ಎಂಬ ಮಾತಿದೆ. ಸಮಾಜಕ್ಕೋಸ್ಕರ ನಾವು ಸೇವೆ
ಸಲ್ಲಿಸಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ
ಕಲ್ಲೂರಾಯ ಮಾತನಾಡಿ ಶುಭಾಶಂಸನೆಗೈದರು. ಈ
ಸಂದರ್ಭದಲ್ಲಿ ಮಾತಾಜಿ ಮೀನಾಕ್ಷಿ ಅವರಿಗೆ ಶ್ರೀರಾಮ ಸೇವಾ
ಗೌರವವನ್ನು ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ
ಗಣರಾಜ ಭಟ್, ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ
ಕೆ.ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ಸಂಘದ ಜತೆ
ಕಾರ್ಯದರ್ಶಿ ಎನ್ ಗಣೇಶ್ ಕುಮಾರ್ ಸ್ವಾಗತಿಸಿ ತೃತೀಯ ಬಿಬಿಎ
ವಿಭಾಗದ ವಿದ್ಯಾರ್ಥಿ ಸಮನ್ವಿತ್ ವಂದಿಸಿದರು. ತೃತೀಯ ಕಲಾ
ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಯು.ಜೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ರಾಮತಾರಕ ಮಂತ್ರ ಪಠಣ ಹಾಗೂ ಸಮರ್ಪಣೆ
ನಡೆಯಿತು. ಮತ್ತು ವಿದ್ಯಾರ್ಥಿಗಳಿಂದ ರಾಮನ ಕುರಿತಾದ ಭಜನೆ
ಹಾಗೂ ಭಕ್ತಿಗೀತೆಗಳ ಪ್ರಸ್ತುತಪಡಿಸಲಾಯಿತು.
