ಪುತ್ತೂರು. ಅ, 22:*
ಮಾನವನ ದೇಹದಲ್ಲಿ 5 ಲೀಟರ್ನಷ್ಟು ರಕ್ತವಿದ್ದು, ಇದರ ಕೇಂದ್ರ ಸ್ಥಾನ ಹೃದಯವಾಗಿದೆ. ಹೃದಯದಲ್ಲಿ 4 ಕೋಣೆಗಳಿದ್ದು, ಎಡಭಾಗವು ಶುದ್ಧ ಮತ್ತು ಬಲಭಾಗವು ಅಶುದ್ಧ ರಕ್ತವನ್ನು ಹೊಂದಿದೆ.ವಿಶ್ರಾಂತಿ ಇಲ್ಲದ ಅಂಗವೆಂದರೆ ಅದು ಹೃದಯ. ರಕ್ತಗಳಲ್ಲಿ ವಿವಿಧ ವಿಂಗಡಗಳು, ಬೇರೆ ಬೇರೆ ಜಾತಿಗಳಿದ್ದು,ಅದರದೇ ಆದ ಕಾರ್ಯವನ್ನು ದೇಹದಲ್ಲಿ ನಿರ್ವಹಿಸುತ್ತದೆ. ರಕ್ತದಾನವನ್ನು 18 ವರ್ಷದಿಂದ 60 ವರ್ಷದವರೆಗಿನವರು ಮಾಡಬಹುದಾಗಿದೆ. ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು ಆದ್ದರಿಂದ ರಕ್ತದಾನ ಶ್ರೇಷ್ಠದಾನ ಎಂದು ರೋಟರಿ – ಕ್ಯಾಂಪ್ಕೋ ರಕ್ತ ಕೇಂದ್ರ ಪುತ್ತೂರು ಮೆಡಿಕಲ್ ಅಧಿಕಾರಿ ಡಾ. ಸೀತಾರಾಮ್ ಭಟ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ ) ಮಹಾವಿದ್ಯಾಲಯ ಇಲ್ಲಿ ಎನ್ ಎಸ್ ಎಸ್, ಎನ್ ಸಿ ಸಿ, ರೋವರ್ ಮತ್ತು ರೇಂಜರ್ಸ್, ರೆಡ್ ಕ್ರಾಸ್, ವಿದ್ಯಾರ್ಥಿ ಸಂಘ, ಎಚ್ ಡಿಫ್ ಸಿ ಬ್ಯಾಂಕ್ ಪುತ್ತೂರು, ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರ, ವೆನ್ಲೋಕ್ ಆಸ್ಪತ್ರೆ ಮಂಗಳೂರು, ರೋಟರಿ – ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ರೋಟರಿ ಕ್ಲಬ್ ಸಿಟಿ ಪುತ್ತೂರು ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ 2024-2025 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ನಮ್ಮ ದೇಹವು ಹೊಸ ಚೈತನ್ಯವನ್ನು ಪಡೆಯುತ್ತದೆ. ಒಬ್ಬರ ರಕ್ತದಾನದಿಂದ 3 ಜೀವವನ್ನು ಉಳಿಸಬಹುದಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ವಿಶ್ರಾಂತ ಅಧ್ಯಾಪಕ ಡಾ. ಹೆಚ್.ಜಿ ಶ್ರೀಧರ್ , ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ಎಚ್ ಡಿಎಫ್ ಸಿ ಬ್ಯಾಂಕ್ ಪುತ್ತೂರು ಸಹಾಯಕ ವ್ಯವಸ್ಥಾಪಕಿ ಭಾಗ್ಯಶ್ರೀ,ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಹಿರಿಯ ಸಲಹೆಗಾರ ಮತ್ತು ಮುಖ್ಯಸ್ಥ ಡಾ.ಶರತ್ ಕುಮಾರ್ ರಾವ್ ಜಿ, ಬ್ಲಡ್ ಬ್ಯಾಂಕ್ ಪ್ರಭಾರ ಅಧಿಕಾರಿ ಅಂಟೋನಿ, ರೋಟರಿ ಕ್ಲಬ್ ಪುತ್ತೂರು ಸದಸ್ಯ ವಿಕ್ಟರ್ ಮಾರ್ಟಿಜ್,ನಾತೇಶ್ ಉಡುಪು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿ ಎ ವಿದ್ಯಾರ್ಥಿನಿ ಪೃಥ್ವಿ ಆಳ್ವ ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿ ಅಭಯ್ ವಂದಿಸಿ, ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರಜ್ಞಾ. ಕೆ ನಿರ್ವಹಿಸಿದರು.